ಪುಸ್ತಕದ ಶೀರ್ಷಿಕೆ : ಕ್ಯಾಡ್ಬರೀಸ್ ನ ಕ್ಯಾಬ್ - ಡೈರೀಸ್
ಲೇಖಕರು : ಪೂರ್ಣೇಶ್
ಪ್ರಕಾಶಕರು : ಪೂರ್ಣೇಶ್
ಪ್ರಥಮ ಮುದ್ರಣ : 2025
ಪುಟಗಳು : 94
ಬೆಲೆ : 120 ರೂ.
ಈ ಕಿರು ಕಾದಂಬರಿಯನ್ನು
"ಕನಸುಗಳ ಒತ್ತೆ ಇಟ್ಟು ಬೆವರು ಸುರಿಸದಿದ್ದರೂ ಕಣ್ಣೀರು ಒರೆಸಿಕೊಂಡು ದುಡಿಯುವ ಎಲ್ಲಾ ಮಗುಮನಸ್ಸಿನ ಶ್ರಮಿಕರಿಗೆ, ಮತ್ತು ನಗರದ ಕ್ಯಾಬ್ ಚಾಲಕರಿಗೆ" ಅರ್ಪಿಸಿದ್ದಾರೆ.
ಪೂರ್ವಕತೆಯಲ್ಲಿ ಕ್ಯಾಡ್ಬರೀಸ್ ಚಾಕ್ಲೇಟ್ ತಿನ್ನುವ ಪುಟ್ಟ ಹುಡುಗ ತನ್ನ ಕನಸಿನೊಂದಿಗೆ ನಮಗೆ ಪರಿಚಯವಾಗುತ್ತಾನೆ. ಅದರ ಜೊತೆಗೆ ಅಣ್ಣಾವ್ರ ಅಭಿಮಾನವೂ ಪರಿಚಯವಾಗುತ್ತದೆ. ವಾಸ್ತವದ ಅರಿವು ಮೂಡಿಸುವ ಅಣ್ಣಾವ್ರ ಹಾಡುಗಳು ಮತ್ತು ಪಾತ್ರಗಳು ಕನಸಿನ ಬೆನ್ನೇರಿ ಹೋಗುವಂತೆ ಮಾಡುವ ಪರಿಯನ್ನು ವಿವರಿಸುವ ಸಾಲುಗಳು ಚೆನ್ನಾಗಿವೆ.
ಪ್ರತಿಯೊಬ್ಬ ಮಗುವಿಗೂ ತಾನು ಮುಂದೇನಾಗಬೇಕು ಎನ್ನುವ ಕನಸಿರುತ್ತದೆ. ತನ್ನ ಭವಿಷ್ಯದ ಕನಸೊಂದನ್ನು ಮಗು ಹೇಳಿದಾಗ ಅಪ್ಪನ ಕಣ್ಣು ಕೆಂಪಾಗುತ್ತಿದ್ದರೆ, ಅಮ್ಮನ ಬೆಂಬಲ ಜೊತೆಗೆ ನಿನಗಿಷ್ಟವಾಗಿರುವುದನ್ನು ಆಯ್ಕೆ ಮಾಡಿಕೋ ಎಂಬ ಹುರಿದುಂಬಿಸುವಿಕೆ ಮಗುವಿಗೆ ಹುಮ್ಮಸ್ಸು ತುಂಬುವುದನ್ನು ಕಾಣಬಹುದು. ಮಗುವಿನ ಆ ಕನಸಿಗೆ ಕಾರಣ ಡ್ರೈವರ್ ಆಗಿದ್ದ ತಂದೆಯೇ.. ಈ ಮಗುವೇ ಪ್ರಶಾಂತ. ಮುಂದೆ ಪ್ರಶಾಂತನ ಜೀವನಗಾಥೆ ನಮ್ಮ ಕಣ್ಮುಂದೆ ಬರುತ್ತಾ ಹೋಗುತ್ತದೆ.
ಮೇಲಿನ ಈ ಪ್ರಸಂಗ ಓದಿದಾಗ ವಿವೇಕಾನಂದರ ಬಾಲ್ಯದ ಘಟನೆಯೊಂದು ನೆನಪಾಯಿತು. ಸಾರೋಟಿನ ಸಾರಥಿಯಾಗುವುದೇ ತನ್ನ ಗುರಿ ಎಂದು ಹೇಳುವ ಬಾಲಕ ನರೇಂದ್ರನಿಗೆ ತಂದೆ ಹೊಡೆದಾಗ, ತಾಯಿ ಅರ್ಜುನನ ರಥದ ಸಾರಥಿ ಶ್ರೀ ಕೃಷ್ಣನನ್ನು ತೋರಿಸಿ ಹುರಿದುಂಬಿಸುವ ಪರಿ ನೆನಪಾಯಿತು. ಮುಂದೆ ನರೇಂದ್ರ ಯುವಶಕ್ತಿಯನ್ನು ಮುನ್ನಡೆಸುವ ಸಾರಥಿಯಾದ ವಿವೇಕಾನಂದರಾದದ್ದು ತಿಳಿದೇ ಇದೆ.
ಕೆಲವೊಮ್ಮೆ ನಾವು ಕಂಡ ಕನಸುಗಳನ್ನು ಬೆನ್ನಟ್ಟಿ ಹೋಗದೆ ಬೇರೆ ಕನಸಿನ ಹಿಂದೆ ಹೋಗುವುದೇ ಬದುಕಿನ ದೊಡ್ಡ ತಿರುವಾಗಿರುತ್ತದೆ. ಪ್ರಶಾಂತನ ಜೀವನದಲ್ಲಿಯೂ ಅಂತಹ ತಿರುವು ಬಂದಿತ್ತು. ಆತ ಡ್ರೈವರ್ ಆಗುವ ಕನಸನ್ನು ಬಿಟ್ಟು ಯಾವ ಕನಸಿನ ಬೆನ್ನು ಬಿದ್ದಿದ್ದ..?
ಪ್ರಶಾಂತನ ಬಾಲ್ಯದಿಂದ ಅವನ ಗೆಳೆಯ ಆತಂಕ ಕೆಲಸದ ಜಾಗದಲ್ಲಿಯೂ ಸಹೋದ್ಯೋಗಿ. ಇವರಿಬ್ಬರ ಸಂಭಾಷಣೆ ಚೇತೋಹಾರಿಯಾಗಿ ಸಾಗುತ್ತದೆ.
ಇಲ್ಲಿ ನರೇಶನ ಪಾತ್ರದ ಮೂಲಕ ಲೇಖಕರು "ಎಲ್ಲಾ ಕನಸಿನ ಹಿಂದೆ ಹೋದರೆ ಕೊನೆಗೆ ನಾವು ಬರೀ ಕೈಯಲ್ಲಿ ಬರಬೇಕಾಗುತ್ತೆ. ಅದೇ ಕಾಡೋ ಕನಸಿನ ಹಿಂದೆ ಹೋದರೆ ನೂರಾರು ಜನಕ್ಕೆ ಅನ್ನ ಹಾಕೋ ಧಣಿ ಆಗ್ತೀಯ. ನಿನ್ನ ಕೈ ಫಸಲಾಗುತ್ತೆ. ಆಗ ನಿನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬಹುದು" ಎಂದು ಹೇಳಿಸುತ್ತಾರೆ.
ಅಂದ ಹಾಗೆ ಇಲ್ಲಿ ನರೇಶನಿಗೆ ವೆಬ್ ಡೆವಲಪರ್ ಆಗುವ ಕನಸಿತ್ತು. ಆದರೆ, ಪರಿಸ್ಥಿತಿಯೊಂದು ಡ್ರೈವಿಂಗ್ ಕ್ಲಾಸ್ ನಡೆಸುವ ಕನಸನ್ನು ಕೊಟ್ಟಿತು. ಈತ ಹೋದದ್ದು ಯಾವ ಕನಸಿನ ಹಿಂದೆ..? ಓದಿ ನೋಡಿ. ಪ್ರಶಾಂತನಿಗೆ ನರೇಶ ಭೇಟಿಯಾಗುವುದು ಹೇಗೆ..?
ಸಾಮಾನ್ಯವಾಗಿ ಜನರು ಡ್ರೈವಿಂಗ್ ಮಾಡುವಾಗ ಮಾಡುವ ತಪ್ಪುಗಳು ಬೇರೆಯವರ ಜೀವನವನ್ನೇ ಬಲಿ ಪಡೆಯಬಹುದು. ಅಂತಹ ತಪ್ಪುಗಳ ಕುರಿತಾಗಿ ಎಷ್ಟು ಎಚ್ಚರಿಕೆ ವಹಿಸಬೇಕು ಎನ್ನುವುದನ್ನು ಬೆಳಕು ಚೆಲ್ಲಿದ್ದಾರೆ. ಡ್ರೈವಿಂಗ್ ಮಾಡುವವರಿಗೆ ಪರಾನುಭೂತಿ ಎಷ್ಟು ಮುಖ್ಯ ಎಂಬುದನ್ನು ಹಾಗೂ ಅದು ಜವಾಬ್ದಾರಿಯಾದಾಗ ಯಾವೆಲ್ಲಾ ಅವಘಡಗಳನ್ನು ತಪ್ಪಿಸಬಹುದು ಎನ್ನುವುದನ್ನು ಹೇಳುತ್ತಾರೆ.
ಪ್ರಶಾಂತ ಚಿಕ್ಕಂದಿನಲ್ಲಿ ಬಹಳ ಇಷ್ಟಪಟ್ಟಿದ್ದ ಕನಸು ಆತನ ಕ್ಲಾಸ್ ನಲ್ಲಿಯೇ ಓದುತ್ತಿದ್ದ ಸೇಠು ಮಗ, ದೊಡ್ಡ ಬಿಲ್ಡಿಂಗನ ಮನೆಯ ಶೇಖರ ಹೇಳಿದ್ದ ಕನಸು. ದೊಡ್ಡವನಾದ ಮೇಲೆ ಅವನು ಪ್ರಪಂಚ ಟೂರು ಹೊಡೆಯಬೇಕೆಂದು. ಚಿಕ್ಕಂದಿನಲ್ಲಿ ದೂರಾಗಿದ್ದ ಗೆಳೆಯರಿಬ್ಬರು ಮತ್ತೆ ಭೇಟಿಯಾದಾಗ ಶೇಖರ ಯಾವ ಕನಸಿನ ಹಿಂದೆ ಬಿದ್ದಿದ್ದ..? ತನ್ನ ಕನಸಿನ ಬೆನ್ನತ್ತಿದವನಿಗೆ ಯಾವ ಅನುಭವವಾಗಿತ್ತು..?
ಎಲ್ಲರೂ ಕನಸುಗಳು ಒಳ್ಳೆಯದು ಎನ್ನುವಾಗ "ಈ ಕನಸುಗಳು ತುಂಬಾ ಕೆಟ್ಟದು ಪ್ರಶಾಂತ" ಎಂದ ರಾಜಶೇಖರನ ಮಾತಿನ ಮರ್ಮವೆನಿತ್ತು..?
ಡ್ರೈವಿಂಗ್ ಕಲಿಯುವ ಕನಸಿರುವವರು, ಡ್ರೈವಿಂಗ್ ಕಲಿತಿರುವವರು ಹಾಗೂ ಡ್ರೈವಿಂಗ್ ಕಲಿಯದವರು ಹೀಗೆ ಎಲ್ಲರಿಗೂ ಕನೆಕ್ಟ್ ಆಗುವಂತಹ ಕಾದಂಬರಿ ಇದು. ಇಲ್ಲಿ ಕನಸಿನೊಳಗೆ ಕಥೆ ಇದೆಯೋ ಅಥವಾ ಕಥೆಯೊಳಗೆ ಕನಸಿದೆಯೋ ನೀವೇ ಓದಬೇಕು.
ಈ ಕಿರು ಕಾದಂಬರಿಯಲ್ಲಿ ಮನುಷ್ಯನ ಜೀವನ ಪ್ರೀತಿ, ಕನಸಿನ ಹಿಂದೆ ಹೋಗುವ ಆತ್ಮವಿಶ್ವಾಸ, ಬದುಕು ತೋರುವ ಭಯ, ಇದೆಲ್ಲದರ ಜೊತೆಗೆ ಆತ್ಮೀಯವಾದ ಸ್ನೇಹ, ಪ್ರೀತಿ, ವಿರಹ, ಅಮ್ಮನ ಕನೆಕ್ಟಿವಿಟಿ ಎಲ್ಲವೂ ಕಾಣಸಿಗುತ್ತದೆ. ಸಮಾಜಕ್ಕೊಂದು ಸಂದೇಶವೂ ಇದೆ. ಚೇತೋಹರಿ ಸಂಭಾಷಣೆಗಳಿಂದ ನನಗೆ ಈ ಕಿರು ಕಾದಂಬರಿ ತುಂಬಾ ಇಷ್ಟವಾಯಿತು. ಆಡು ಮಾತಿನಂತಹ ಸಂಭಾಷಣೆಗಳನ್ನು ತುಟಿಯಲ್ಲಿ ಮುಗುಳ್ನಗೆ ಇಟ್ಟುಕೊಂಡೇ ಓದಬಹುದಾಗಿದೆ. ಇಲ್ಲಿ ಪ್ರಶಾಂತನ ಜೊತೆಗೆ ನಾವು ಟ್ರಾವೆಲ್ ಮಾಡುತ್ತಾ ಸಾಗುತ್ತೇವೆ.
"ಕಾಡುತ್ತೆ, ಆದರೆ ಹಿಂಸೆ ಕೊಡಲ್ಲ,
ಕೊಲ್ಲುತ್ತೆ, ಆದರೆ ಉಸಿರು ನಿಲ್ಸಲ್ಲ,
ಕಣ್ಣಿದುರೆ ಇರುವಂತಾಗುತ್ತೆ, ಆದರೆ ನೆನಪಿಗೆ ಬರಲ್ಲ,
ಅದು ಗೆದ್ದಾಗ ಅಳು ಬರುತ್ತೆ,
ಕೆಲವೊಮ್ಮೆ ಆನಂದದಿಂದ,
ಕೆಲವೊಮ್ಮೆ ದುಃಖದಿಂದ,
ಅದು ಏನು?"
ಬೆನ್ನುಡಿಯಲ್ಲಿ ಲೇಖಕರು ಈ ಒಗಟನ್ನು ಪ್ರಸ್ತಾಪಿಸಿದ್ದಾರೆ ಈ ಒಗಟಿಗೆ ಉತ್ತರ ಕಥೆಯಲ್ಲಿದೆ. ಬಹುಶಃ ಈ ಒಗಟಿಗೆ ಉತ್ತರ ತಿಳಿದರೂ.. ಸರಿಯೋ ತಪ್ಪೋ ಎಂದು ಪರಿಶೀಲಿಸುವುದಕ್ಕಾದರೂ ಈ ಕಿರು ಕಾದಂಬರಿಯನ್ನು ಓದಬೇಕು.
ಝೋನ್ ಔಟ್ ಆಗಿರುವ ನಮ್ಮ ಓದನ್ನು ಮತ್ತೆ ಹಳಿಗೆ ತರಬಹುದಾದಂತಹ ಪುಟ್ಟ ಚಂದದ ಹಾಗೂ ರಿಫ್ರೆಶಿಂಗ್ ಓದಿನ ಕಿರು ಕಾದಂಬರಿ ಬಹಳ ಇಷ್ಟವಾಯಿತು. ಬರವಣಿಗೆಯ ಶೈಲಿಯಿಂದಾದ ಉದಯೋನ್ಮುಖ ಬರಹಗಾರರಲ್ಲಿ ಭರವಸೆಯ ಬರಹಗಾರ ಎನ್ನಿಸಿದರು ಇವರು. ಪೂರ್ಣೇಶ್ ಅವರ ಮುಂದಿನ ಸಾಹಿತ್ಯ ಪಯಣಕ್ಕೆ ಶುಭವಾಗಲಿ.
~ ವಿಭಾ ವಿಶ್ವನಾಥ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ