ಸೋಮವಾರ, ಏಪ್ರಿಲ್ 27, 2026

ಲಂಚ್ ಬಾಕ್ಸ್ (ಪುಸ್ತಕ ಯಾನ - 441)


ಪುಸ್ತಕದ ಶೀರ್ಷಿಕೆ : ಲಂಚ್ ಬಾಕ್ಸ್

ಲೇಖಕರು : ರಾಜು ಪುಸ್ತಕಗ್ರಾಮ್ 

ಪ್ರಕಾಶಕರು : ಅವ್ವ ಪುಸ್ತಕಾಲಯ 

ಪ್ರಥಮ ಮುದ್ರಣ : ಜನವರಿ 2026

ಪುಟಗಳು : 136

ಬೆಲೆ : 150 ರೂ. 


ಓದಿನ ಹವ್ಯಾಸಿಯಾಗಿರುವ ಇವರು ಇನ್ಸ್ಟಾಗ್ರಾಮ್ ನಲ್ಲಿ ಪುಸ್ತಕಗ್ರಾಮ್ ಎನ್ನುವ ಪುಟವನ್ನ ನಿರ್ವಹಿಸುತ್ತಿದ್ದಾರೆ. ಪುಸ್ತಕಗಳ ಓದಿನ ರುಚಿಯೇ ಇವರನ್ನು ಬರಹಕ್ಕೂ ಹಚ್ಚಿರುವುದು ನಿಜಕ್ಕೂ ಖುಷಿಯ ಸಂಗತಿ. ಇವರ ಸಾಹಿತ್ಯ ಕೃತಿಯನ್ನು ಗುರುತಿಸಿ ಹರಿವು ಪ್ರಕಾಶನದವರು ನೀಡಿರುವ 'ಗಳಗನಾಥ ' ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ರಂಗಭೂಮಿಯ ಚಟುವಟಿಕೆ, ಚಿತ್ರಕಲೆ, ಫೋಟೋಗ್ರಫಿಯನ್ನು ಹವ್ಯಾಸ ಮಾಡಿಕೊಂಡಿರುವವರು ರಂಗವರ್ಸ್ ಎಂಬ ಇನ್ಸ್ಟಾಗ್ರಾಮ್ ಪೇಜ್ ಅನ್ನೂ ನಿರ್ವಹಿಸುತ್ತಿದ್ದಾರೆ. 'ಲಂಚ್ ಬಾಕ್ಸ್' ಇವರ ಚೊಚ್ಚಲ ಕೃತಿ. 


ಈ ಕಥಾಸಂಕಲನದಲ್ಲಿ 7 ಕಥೆಗಳಿವೆ. 


ಲಂಚ್ ಬಾಕ್ಸ್ : ಅಮ್ಮನ ಕೈ ರುಚಿ ಹಾಗೂ ಲಂಚ್ ಬಾಕ್ಸ್ ಜೊತೆಗೆ ತೆರೆದುಕೊಳ್ಳುವ ಈ ಕಥೆ ಅಪಾರ್ಟ್ಮೆಂಟ್ ಪಕ್ಕದ ಅಣತಿ ದೂರದ ಮೋರಿಯ ಪಕ್ಕದಲ್ಲಿದ್ದ ಸ್ಲಮ್ಮಿನ ಬದುಕನ್ನು ಸಹ ತೋರಿಸುತ್ತದೆ. ಜೊತೆಗೆ ಮನೆಯಲ್ಲಿ ಕಷ್ಟಪಟ್ಟು ತಯಾರು ಮಾಡಿರುವ ಲಂಚ್ ಬಾಕ್ಸ್ ಅನ್ನು ಇಟ್ಟುಕೊಂಡು ಉದಾಸೀನದಿಂದ ಇರುವಂತೆ ಕಾಣುವ ಬೈಕ್ ಓಡಿಸುವವನ ಮನಸ್ಥಿತಿ ಅವರ ಪ್ರೊಫೆಷನಲ್ ಸಮಸ್ಯೆಗಳ ಜೊತೆಗೆ ಕೊರೊನಾ ದಿನಗಳ ದರ್ಶನವನ್ನು ಮಾಡಿಸುತ್ತದೆ. ಸ್ಲಂನಲ್ಲಿರುವ ನಿರ್ಗತಿಕರಿಗೆ ಅನ್ನದ ಪೊಟ್ಟಣಗಳನ್ನು ಹಂಚುವ ಕೆಲಸಕ್ಕೆ ಇಳಿದಿದ್ದ ಸಿದ್ದು ವಿಗೆ ಆಪ್ತ ಬಂಧವೊಂದು ಸಿಕ್ಕಿತ್ತು. ಅದೇ ಮುಖದಲ್ಲಿ ಮುಗ್ಧತೆ ತುಂಬಿಕೊಂಡಿದ್ದ ಆ ಮಗು. ಕೋವಿಡ್ ದಿನಗಳ ಲಂಚ್ ಬಾಕ್ಸ್ ಹಾಗೂ ಆ ಮಗುವಿನ ಹಸಿವು ಎರಡನ್ನೂ ತೆರೆದಿಟ್ಟಿರುವ ಕರುಣಾಚಲಕ ಕಥೆ ಇಲ್ಲಿದೆ. ಅನ್ನದ ಮಹತ್ವವನ್ನು ಹೀಗೆ ತೆರೆದಿಟ್ಟಿದ್ದಾರೆ.


ಮೃತ್ಯುಂಜಯ : ಸಾವನ್ನು ಗೆದ್ದವನು ಎಂಬರ್ಥದ ಹೆಸರು ಇದು. ಅಪ್ಪ, ಅಮ್ಮ, ತಂಗಿ ಮೂವರೂ ತಿರುಪತಿಗೆ ಹೊರಟ ಸಂದರ್ಭದಲ್ಲಿ ಅವರೊಡನೆ ಹೋಗದೆ ಉಳಿದುಕೊಂಡಿದ್ದವನು ತಾನೇ ಸಾವನ್ನು ಆಹ್ವಾನಿಸುವ ಹುಚ್ಚು ಧೈರ್ಯ ಮಾಡುತ್ತಾನೆ. ಅಷ್ಟಕ್ಕೂ ಆತನಿಗಿದ್ದ ಸಮಸ್ಯೆ ಏನು? ಹದಿಹರೆಯದ ವಯಸ್ಸಿನವರು ಇಂತಹ ಸಮಸ್ಯೆಗಳಿಗೆ ಹೆದರಿ ಆತ್ಮಹತ್ಯೆಯ ಮೊರೆ ಹೊಕ್ಕರೆ ಹೇಗಿರುತ್ತದೆ..? ಸೋಲುಗಳನ್ನು ಸಹಿಸಿಕೊಳ್ಳುವ ಮನೋಭಾವ ಹಾಗೂ ಸಹನೆಯ ಪಾಠ ಹದಿಹರೆಯದವರಿಗೆ ಬಹಳ ಅವಶ್ಯಕ. ಇಲ್ಲಿ ನಮ್ಮ ಕಥೆಯ ನಾಯಕ ಸಾವನ್ನು ಗೆದ್ದು ಬರುತ್ತಾನಾ ಓದಿ ನೋಡಿ.


ಅಪ್ಪನ ನೆರಳು :

"ಮನಸಲ್ಲಿ ನಡೆಯೋ ಸಮರಕ್ಕೂ ಹೊರವಲಯದ ಮೌನಕ್ಕೂ ಅದೆಷ್ಟು ಅಂತರ."

ಕೌಟುಂಬಿಕ ವಾತಾವರಣ ಹಾಗೂ ಮನಸ್ಸಿನ ಸಂಘರ್ಷಗಳ ಚಿತ್ರಣವನ್ನು ಇಲ್ಲಿ ಕಾಣಬಹುದು. ಇದು ಸಹ ಕೊರೊನಾ ಕಾಲಘಟ್ಟದ ಕಥೆ. ಊರಿನ ಪದ್ಧತಿಯಂತೆ ಒಂದೇ ಚಪ್ಪರದಲ್ಲಿ, ಒಂದೇ ವೇದಿಕೆಯಲ್ಲಿ ಅಣ್ಣ ತಮ್ಮನ ಮದುವೆ ಮಾಡಿಬಿಡುತ್ತಿದ್ದರು. ಅಣ್ಣನ ಮದುವೆಯ ಸಂದರ್ಭದಲ್ಲಿ ತನಗಿನ್ನೂ ಮದುವೆಯ ಯೋಚನೆ ಇಲ್ಲ ಎಂದು ಹೇಳಿಬಿಟ್ಟಿದ್ದವನು ಪ್ರೀತಿಸಿದ ಹುಡುಗಿಯನ್ನು ಮುಂದಿನ ದಿನಗಳಲ್ಲಿ ಪರಿಚಯಿಸಿದ. ಮೊದಮೊದಲು ಮನೆಯಲ್ಲಿ ವಿರೋಧ ವ್ಯಕ್ತವಾದರೂ ನಂತರ ಮದುವೆ ನಿಶ್ಚಯವಾಗಿತ್ತು. ಹೀಗೆ ನಿಶ್ಚಯವಾದ ನಿರಂಜನ ಹಾಗೂ ಜಾನಕಿಯ ಮದುವೆಯ ಸಂದರ್ಭದಲ್ಲಿಯೇ ಅಪ್ಪನ ಆರೋಗ್ಯ ಹದಗೆಟ್ಟಿತ್ತು. ನಿರಂಜನನ ಮನಸ್ಸಿನ ತುಡಿತ ಯಾವ ಕಡೆಗಿತ್ತು..? ಈ ವಿವಾಹದ ತೀರ್ಮಾನ ಅವನ ಬದುಕಿನ ಯಾವೆಲ್ಲ ಬದಲಾವಣೆಗಳಿಗೆ ಸಾಕ್ಷಿಯಾಗಿತ್ತು..? 'ಅಪ್ಪನ ನೆರಳು' ನಿರಂಜನನ ಭವಿಷ್ಯದಲ್ಲಿ ಯಾವ ರೂಪ ಪಡೆಯುತ್ತದೆ ಓದಿ ನೋಡಿ.


ಮರೆಯಲಾಗದ ಮದುವೆ : ತಮ್ಮ ಆಫೀಸಿನ ಸಹೋದ್ಯೋಗಿಯಾಗಿದ್ದ ಸುರೇಶ ನ ಮದುವೆ ರಾಯಚೂರಿನ ಒಂದು ಹಳ್ಳಿಯಲ್ಲಿತ್ತು. ಇದ್ದ 8-10 ಉದ್ಯೋಗಿಗಳಲ್ಲಿ ಐವರು ತಮ್ಮ ಬಾಸ್ ಕೊಟ್ಟ ಕಾರಿನಲ್ಲಿ ಹೊರಟಿದ್ದರು. ಇಲ್ಲಿಂದ ಹೊರಡುವಾಗ ಮದುವೆಯಲ್ಲಿ ಹೇಗೆಲ್ಲಾ ಮಜಾ ಮಾಡಬಹುದು ಎಂದು ಮದುವೆ ಮನೆಗೆ ತಲುಪುವ ಮುನ್ನವೇ ಪ್ಲಾನ್ ಮಾಡಿಕೊಂಡಿದ್ದರು. ಅತ್ತ ಸುರೇಶನೂ ಇವರ ಬರುವಿಕೆಗಾಗಿ ಕಾಯುತ್ತಿದ್ದ. ಆದರೆ, ದಾರಿಯಲ್ಲಿ ಆದ ಎಡವಟ್ಟೊಂದು ಇವರ ಬದುಕಿನಲ್ಲಿ ಸುರೇಶನ ಮದುವೆಯನ್ನು ಮರೆಯಲಾಗದ ಮದುವೆಯನ್ನಾಗಿಸಿತು. ಸಂಭಾಷಣೆಗಳು ನೈಜವಾಗಿ ಮೂಡಿಬಂದಿವೆ. 


ಕನಸಿನಾಳ : ಕನಸಿನ ಕಲ್ಪನೆಗೂ ವಾಸ್ತವದ ನಿರಸನಕ್ಕೂ ಮಧ್ಯದಲ್ಲೊಂದು ಸಣ್ಣ ಎಳೆಯಿದೆ. ಎಳೆಯನ್ನು ದಾಟಿ ಮತ್ಯಾವುದೋ ಆಯಾಮದಲ್ಲಿ ನಾನೀಗ ನಿಂತಿರಬಹುದು ಎಂಬ ಸಣ್ಣ ಅನುಮಾನದಿಂದ ಎಂದು ಹೇಳುತ್ತಲೇ ಕಥೆಯ ಪ್ರವೇಶಿಕೆಗೆ ಅಡಿ ಇಟ್ಟರೂ ಕಥೆ ವಿಭಿನ್ನವಾಗಿ ಸಾಗುತ್ತದೆ. ರೈಲಿನಲ್ಲಿ ಪ್ರಯಾಣ ಮಾಡಬೇಕಾಗಿದ್ದ 366 ಜನರಲ್ಲಿ 364 ಜನರ ಆಯ್ಕೆ ಪ್ರಕ್ರಿಯೆ ಮುಗಿದಿತ್ತು. ಉಳಿದಿರುವುದು ಇಬ್ಬರೇ. ಆ ಎರಡು ಜಾಗ ಯಾರದ್ದಿರಬಹುದು ಎಂಬ ಕುತೂಹಲದಿಂದಲೇ ಮೊದಲಿಡುವ ರೈಲಿನ ಪ್ರಯಾಣ ಎಲ್ಲರಿಗೂ ಮುಖ್ಯವಾಗಿತ್ತು. ಅದೇನೆಂದರೆ ಆ ರೈಲು ಪ್ರಪಂಚ ಪರ್ಯಟನೆಗೆಂದೇ ನಿಂತಿತ್ತು. ರೈಲಿನ ಪ್ರಪಂಚ ಪರ್ಯಟನೆ, ನವಿಲುಗರಿ ಟೋಪಿಯವನು, ರೈಲಿನ ಒಳ ಹೊಕ್ಕ ನಂತರ ಬದಲಾಗುವ ಪರಿಸ್ಥಿತಿ ಹೀಗೆ ಹಲವಾರು ಕಲ್ಪನೆಗಳಿಂದ ಕಟ್ಟಿಕೊಟ್ಟಿರುವ ಕಥೆ ಇದು. ಈ ಕಥಾ ಸಂಕಲನದಲ್ಲಿ ನನಗೆ ಇಷ್ಟವಾದ ಹಾಗೂ ವಿಭಿನ್ನವಾದ ಕಥೆ.


ರಾಜಾಯಣ : ಪ್ರೀತಿಯಲ್ಲಿ ಯಾವುದು ಬಹು ಮುಖ್ಯಪಾತ್ರ ವಹಿಸುತ್ತದೆ ಎನ್ನುವುದಕ್ಕೆ ಉತ್ತರ ಬಹಳ ಕಷ್ಟ. ಅದು ಪ್ರತಿಯೊಬ್ಬರ ವೈಯಕ್ತಿಕ ನಿರ್ಧಾರದ ಮೇಲೆ ಅವಲಂಬಿತ. ಏಳು ವರ್ಷಗಳಿಂದ ತಿಳಿದಿದ್ದ, ಸ್ನೇಹದಿಂದ ಪ್ರೀತಿಗೆ ತಿರುಗಿತ್ತ ಪ್ರೇಮವೊಂದು ಧ್ವನಿಯ ಕಾರಣಕ್ಕಾಗಿ ಕಳಚಿ ಬಿಡಬಹುದಾ..? ಹಾಗಾದಾಗ ಮೂಡುವ ಅಭದ್ರತೆಯ ಭಾವ, ಕಡಿಮೆಯಾಗುವ ಆತ್ಮವಿಶ್ವಾಸ ಬದುಕನ್ನು ಬೇರೆಯದ್ದೇ ದಿಕ್ಕಿಗೆ ಕೊಂಡೊಯ್ಯಬಹುದು . ಪ್ರಪಂಚ ಯಾವುದನ್ನು ದೋಷವೆಂದು ಹೀಯಾಳಿಸಿತ್ತೋ ಅಂತಹ ದೋಷವೇ ಮತ್ತೊಬ್ಬರಿಗೆ ಇಷ್ಟವಾಗಿ ಪ್ರೀತಿಯಾದರೆ..?! ಇಲ್ಲಿ ಮತ್ತೆ ಪ್ರೀತಿಯಾಗಿದ್ದು ಯಾರಿಗೆ ಓದಿ ನೋಡಿ.


ಫಲ್ಗುಣಿ :  "ಈ ಜಗತ್ತಿನಲ್ಲಿ ಯಾರ ಜೀವನವು ಒಂದೇ ರೀತಿ ಸಮತೋಲನದಿಂದಿರಲು ಸಾಧ್ಯವಿಲ್ಲ ಅಂತಯೇ ಮನಸ್ಥಿತಿ ಕೂಡ ಎಲ್ಲರ ಜೀವನದಲ್ಲೂ ಎಲ್ಲದರಲ್ಲೂ ಏರಿಳಿತಗಳು ಇರುತ್ತವೆ." ಅಂತಹ ಏರಿಳಿತಗಳಿದ್ದಾಗ ಮನುಷ್ಯನ ವರ್ತನೆಯು ಬದಲಾಗುತ್ತದೆ. ಇಲ್ಲಿ ಫಲ್ಗುಣಿಯ ಬದುಕು ಸಹ ಅಂತೆಯೇ ಇತ್ತು. ಮುಂದೇನು ಮಾಡಬೇಕು ಎಂದು ಬುದ್ಧಿಯ ಮಾತು ಕೇಳುವುದೋ ಅಥವಾ ಮನಸ್ಸಿನ ಮಾತು ಕೇಳುವುದೋ ಎಂಬುದು ಆಯಾ ವ್ಯಕ್ತಿಯ ಮೇಲೆ ಹಾಗೂ ಪರಿಸ್ಥಿತಿಯ ಮೇಲೆ ಅವಲಂಬಿತ. ಕೊನೆಯ ಕ್ಷಣದಲ್ಲಿ ಅಣ್ಣನಿಗೆ ತಾನು ಮಾತ್ರೆಗಳನ್ನು ತೆಗೆದುಕೊಂಡ ವಿಚಾರ ತಿಳಿಸಿದ ಫಲ್ಗುಣಿಯ ನಿರ್ಧಾರ ಏನಿತ್ತು..? ಫಲ್ಗುಣಿ ತೆಗೆದುಕೊಂಡ ಆ ನಿರ್ಧಾರಕ್ಕೆ ಕಾರಣವೇನಿತ್ತು..? ಮುಂದೇನಾಗುತ್ತದೆ ಎಂದು ಕಾತುರದಿಂದಲೇ ಓದುವಂತೆ ಕಟ್ಟಿಕೊಟ್ಟಿರುವ ಕಥೆ ಇದು. 


ಪ್ರತಿ ಕತೆಗೂ ಮುನ್ನ ಇರುವ ಕತೆಗೆ ಸಂಬಂಧಿಸಿದ ಚಿತ್ರಗಳು ಅರ್ಥಪೂರ್ಣವಾಗಿವೆ. 

ಈ ಕಥಾಸಂಕಲನದಲ್ಲಿ ಹೆಚ್ಚು ಇಷ್ಟವಾಗಿದ್ದು ಸಂಭಾಷಣೆಗಳನ್ನು ಆಪ್ತವಾಗಿ ಕಟ್ಟಿಕೊಟ್ಟಿರುವ ಪರಿ. ಲೇಖಕರ ಮುಂದಿನ ಸಾಹಿತ್ಯ ಕೃಷಿಗೆ ಶುಭವಾಗಲಿ ಎಂದು ಹಾರೈಸುವೆ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ